Thursday, July 7, 2022

ಒಬ್ಬ ನಿಸರ್ಗಾಧ್ಯಾಯಿಯ ಅಂತ್ಯ SEAMUS HEANEY'S 'DEATH OF A NATURALIST'

ಎರಡು ವರುಷಗಳ ಹಿಂದೆ ನಾನು ಶೇಯ್ಮಸ್ ಹೀನಿಯವರ (SEAMUS HEANEY) ಇಂಗ್ಲಿಷ್ ಕವನ ‘ಡಿಗಿಂಗ್ಅನ್ನು (Digging) ಕನ್ನಡಕ್ಕೆಅನುವಾದ ಮಾಡಿದ್ದೆ.  ಹೀನಿಯವರ ವಿಶ್ವ-ಪ್ರಸಿದ್ಧ ಕವನ.  ಅದು ನನ್ನ ಮೊದಲ ಇಂಗ್ಲಿಷ್-ಟು-ಕನ್ನಡ ಕವನಾನುವಾದವಾಗಿತ್ತು.  ‘ಬಂದ್ರೆಬಂತು ಹೋದ್ರೆ ಹೋಯ್ತು’ ಅಂತ ಮೊಂಡು ಧೈರ್ಯದಿಂದ ಕೈಗೊಂಡ ಕಾರ್ಯವಾಗಿತ್ತು ಆಗ.  ಕೆಲವರು ಕಾವ್ಯಾಸಕ್ತರು ಓದಿದರು, ಕೆಲವರು ಓದಿ ತಮ್ಮ ಮೆಚ್ಚುಗೆ ತಿಳಿಸಿದರು.  ಅದೂ ಓಳ್ಳೆಯದೇ ಆಯ್ತು.  ಹೀನಿಯವರ ಸುಮಾರು ಎಲ್ಲಾ ಕವನ ಸಂಕಲನಗಳನ್ನ ಕೊಂಡಿರುವೆಕವನಗಳನ್ನು ಓದುತ್ತಿರುವಾಗೆಲ್ಲಾ ಅನುವಾದದ ಆಸೆ ಚಿಗುರುತ್ತೆಆದರೆ ಆಗಿದ್ದ ಮೊಂಡು ಧೈರ್ಯ  ಮಧ್ಯೆ ಬರಲಿಲ್ಲ.  ಈಗ ಬಂದಂತಿದೆಈಗ ಎರಡು ವರುಷಗಳ ನಂತರ ಮತ್ತೆ ಶೇಯ್ಮಸ್ ಹೀನಿಯವರ ಕವನವೊಂದನ್ನು ಕನ್ನಡಾನುವಾದಕ್ಕೆ ತೆಗೆದುಕೊಂಡಿರುವೆ.  ಅವರ ಮತ್ತೊಂದು ಹೆಸರಾಂತ ಕವನಅವರ ಮೊದಲ ಸಂಕಲನದ ಹೆಸರು ಹೊತ್ತ ಕವನ – Death of a Naturalist ... Digging-ನಲ್ಲಿ ಇದ್ದಹಾಗೆ ಈ ಕವನದಲ್ಲೂ ತಮ್ಮ ಬಾಲ್ಯಕಾಲದ ನೆನಪುಗಳನ್ನು ಶಬ್ಧಗಳ, ದೃಶ್ಯಗಳ ಮೂಲಕ ಅಪೂರ್ವವಾಗಿ ಹೆಣೆದಿದ್ದಾರೆ – ಮೊದಲ ಭಾಗ ದೃಶ್ಯಗಳಿಂದ ತುಂಬಿದೆ; ಎರಡನೆಯ ಭಾಗ ಶಬ್ಧಗಳ ಸಾಮ್ರಾಜ್ಯ; ಮೊದಲ ಭಾಗ ಯತಾರ್ಥದ ವರ್ಣನೆಯಾದರೆ, ಎರಡನೆಯ ಭಾಗ ಕಲ್ಪನೆಯ ನಾಗಾಲೋಟ ...   

 

ಇಂಗ್ಲಿಷ್ ಮೂಲ: DEATH OF A NATURALIST

ಕವಿ: ಶೇಯ್ಮಸ್ ಹೀನಿ, ಐಯರ್‌ಲ್ಯಾಂಡ್

SEAMUS HEANEY, IRELAND

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


ಬ್ಬ ನಿಸರ್ಗಾಧ್ಯಾಯಿಯ ಅಂತ್ಯ

 

ವರುಷವೆಲ್ಲ ಅಗಸೆನಾರಿನಕಟ್ಟೆ ಕೊಳೆಯುತ್ತಿತ್ತು 

ರಿನ ಮಧ್ಯದಲ್ಲಿ; ಹಸಿರು ಹಸಿರಾಗಿ ಭಾರ-ತಲೆಯ ಹೊತ್ತು

ಅಗಸೆನಾರು ಅಲ್ಲಿ ಕೊಳೆತುಹೋಗಿತ್ತು,  

ಹೆಪ್ಪುಮಣ್ಣಿನ ಭಾರದಿಂದ ಜಗ್ಗಿಹೋಗಿತ್ತು.   

ದಿನವೂ ಅದು ಸೂರ್ಯನ ಉರಿಯಡಿಯಲ್ಲಿ ಬೆವರುತ್ತಿತ್ತು, 

ನೀರ್ಗುಳ್ಳೆಗಳು ಮೆತ್ತಗೆ ಗುಳುಗುಳಿಸುತ್ತಿದ್ದವು, ನೀಲಿನೊಣಗಳು

ಆ ಕಂಪಿನ ಸುತ್ತ ಬಲವಾದ ಸದ್ದಿನ ನವಿರುಜಾಲರಿಯನ್ನು ಹೆಣೆಯುತ್ತಿದ್ದವು.

ಅಲ್ಲಿದ್ದವು ಡ್ರ್ಯಾಗನ್‌ದುಂಬಿಗಳು, ಚುಕ್ಕೆಚಿಟ್ಟೆಗಳು, 

ಆದರೆ ಎಲ್ಲಕ್ಕಿಂತ ಮೇಲಾಗಿ ದಟ್ಟವಾದ ಬೆಚ್ಚನೆಯ

ಕಪ್ಪೆಮೊಟ್ಟೆಗಳ ಜೊಲ್ಲು ಹರಡುತ್ತಿತ್ತಲ್ಲಿ ಹೆಪ್ಪುಗಟ್ಟಿದ ನೀರಿನಂತೆ

ದಡಗಳ ನೆರಳಿನಲ್ಲಿ,  ಇಲ್ಲಿ, ಪ್ರತಿ ವಸಂತಮಾಸ,

ನಾನು ಜ್ಯಾಮ್ ಬಾಟ್ಲಿಗಳಲ್ಲಿ ಈ ಲೋಳೆಗಟ್ಟಿದ ಚುಕ್ಕೆಗಳನ್ನು 

ತುಂಬಿಸಿ ಮನೆಯ ಜನ್ನಲಕಟ್ಟೆಗಳಲ್ಲಿ, 

ಶಾಲೆಯ ಶೆಲ್ಫ್-ಗಳಲ್ಲಿ ಸಾಲಾಗಿ ನಿಲ್ಲಿಸುವೆ, ಕಾಯುವೆ 

ಕಾವಲಿರುವೆ ಆ ಕೊಬ್ಬುತ್ತಿರುವ ಚುಕ್ಕೆಗಳು ಚುರುಕೀಜುವ ಗೊದಮೊಟ್ಟೆಗಳಾಗಿ

ಸ್ಫೋಟವಾಗುವ ವರೆಗೂ.  ಮಿಸ್ ವಾಲ್ಸ್ ಹೇಳುವರು ನಮಗೆ

ಅಪ್ಪ-ಕಪ್ಪೆಯನ್ನು ಗೋಂಕರುಕಪ್ಪೆಯೆಂದು ಕರೆಯುತ್ತಾರೆಂದು, 

ಅವನು ಹೇಗೆ ವಟಗುಟ್ಟುತ್ತಾನೆಂದು, ಮತ್ತೆ ಅಮ್ಮ-ಕಪ್ಪೆ

ನೂರಾರು ಮೊಟ್ಟೆಗಳನ್ನು ಇಡುತ್ತಾಳೆಂದು, ಇದನ್ನೆ ಕಪ್ಪೆಮೊಟ್ಟೆಗಳ

ಜೊಲ್ಲು ಎಂದನ್ನುತ್ತಾರೆಂದು.  

ಕಪ್ಪೆಗಳನ್ನ ನೋಡಿ ಹವಾಮಾನ ಕೂಡ ಹೇಳಬಹುದಂತೆ

ಅವು ಬಿಸಿಲ್ಗಾಲದಲ್ಲಿ ಹಳದಿಯಾಗಿರುತ್ತವೆ,

ಮಳೆಗಾಲದಲ್ಲಿ ಕಂದಾಗಿರುತ್ತವಂತೆ. 

 

ಮತ್ತೊಂದು ಸುಡುವ ದಿನದಂದು ಹುಲ್ಲಿನಲ್ಲಿ ಬಿದ್ದ 

ಸೆಗಣಿಯಿಂದಾಗಿ ಹೊಲಗಳು ನಾರುತ್ತಿದ್ದಾಗ, ಕುಪಿತ ಕಪ್ಪೆಗಳು

ಅಗಸೆನಾರಿನಕಟ್ಟೆಗೆ ದಾಳಿಮಾಡಿದವು; ಈ ಹಿಂದೆ ಎಂದೂ ಕೇಳಿರದ 

ಕರ್ಕಶ ವಟವಟಗಳ ಕೇಳಿದೆ ನಾನು

ಬೇಲಿಗಳ ಹಿಂದೆ ತಲೆಬಗ್ಗಿಸಿಕೊಂಡೆ.

ಗಾಳಿಯಲ್ಲಿ ದಟ್ಟವಾಗಿ ಹರಡಿತ್ತು ಈ ಘನ ಮೇಳದ ಸದ್ದು.

ಆ ಕಟ್ಟೆಯ ಜಾಗದಲ್ಲಿ, ಡೊಳ್ಳುಹೊಟ್ಟೆಯ ಕಪ್ಪೆಗಳು ನಿಮಿರಿ 

ನಿಂತಿದ್ದವು ಹೆಪ್ಪುಮಣ್ಣಿನಲ್ಲಿ; ಅವುಗಳ ಜೋಲು ಕತ್ತುಗಳು ಬಡಿಯುತ್ತಿದ್ದವು

ದೋಣಿಹಾಯಿಗಳಂತೆ.  ಕೆಲವು ಕಪ್ಪೆಗಳು ಕುಪ್ಪಳಿಸುತ್ತಿದ್ದವು: 

ಆ ಅಪ್ಪಳ, ಪೊಳಪ್ ಪೊಳಪ್ ಸಪ್ಪಳ ಅಸಹ್ಯ ಬೆದರಿಕೆಗಳಂತೆ ಕೇಳಿಸಿತು.

ಕೆಲವು ಕಪ್ಪೆಗಳು ಕೂತಿದ್ದವು

ಸನ್ನದ್ಧವಾಗಿ ಮಣ್ಣುಬಾಂಬುಗಳಂತೆ, ಅವುಗಳ ಮೊಂಡು ತಲೆಗಳು ಕೆಪ್ಪೆ ಕೂಗುತ್ತಿದ್ದವು.

ನನಗೆ ವಾಂತಿ ಬಂತು, ನಾನಲ್ಲಿಂದ ತಿರುಗಿ ಓಡಿದೆ.  ಆ ಭಾರಿ ಲೋಳೆ ರಾಜರು

ಸೇಡು ತೀರಿಸಿಕೊಳ್ಳುವುದಕ್ಕಾಗಿ ಸೇರಿದ್ದರು ಅಲ್ಲಿ, 

ನಾನೆಲ್ಲಾದರು ಕೈ ಅದ್ದಿದ್ದರೆ 

ಆ ಮೊಟ್ಟೆಜೊಲ್ಲು ನನ್ನ ಕೈಯ ಕಚ್ಚಿಕೊಳ್ಳುತಿತ್ತು 

ನನಗೆ ಗೊತ್ತಿತ್ತು.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...